ಕಲಬುರಗಿ ನಗರದಲ್ಲಿನ ಇಎಸ್ ಐಸಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿಕಿರಣಶಾಸ್ತ್ರ ವಿಭಾಗದಲ್ಲಿ ಸಿಟಿ ಸ್ಕ್ಯಾನ್ ಮಾಡುವುದಕ್ಕೆ 30 ದಿನಗಳ ಸಮಯ ತೆಗೆದುಕೊಳ್ಳುತ್ತಿರುವುದನ್ನು ಸರಿಪಡಿಸಬೇಕು ಮತ್ತು ಆಸ್ಪತ್ರೆಯಲ್ಲಿ ನರರೋಗ ತಜ್ಞರ ವಿಭಾಗವನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಹೋರಾಟಗಾರ ದತ್ತಾತ್ರೆಯ ಕುಡಕಿ ಒತ್ತಾಯಿಸಿದ್ದಾರೆ
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಅಖಿಲ ಕರ್ನಾಟಕ ದಲಿತ ಸೇನೆ ವತಿಯಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕುಡಕಿ ಅವರು ಉತ್ತರ ಕರ್ನಾಟಕದ ಮಹಾರಾಷ್ಟ್ರದ ಮರಾಠವಾಡ ಮತ್ತು ತೆಲಂಗಾಣದ ಕೆಲವು ಪ್ರದೇಶದ ಇಎಸ್ ಐ ಫಲಾನುಭವಿಗಳಿಗೆ ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯ ಅಪಾಯಗಳ ನಿರ್ವಹಣೆಗಾಗಿ ಕೆಲಸ ಮಾಡುವ ಪುರುಷ ಮತ್ತು ಮಹಿಳೆಯರ ಸುರಕ್ಷಿತ ಮತ್ತು ಆರೋಗ್ಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಸತತ ಪ್ರಯತ್ನದಿಂದ 2014 ರಲ್ಲಿ ಲೋಕಾರ್ಪಣೆಗೊಂಡ ಕರ್ನಾಟಕದ ಎರಡನೇ ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳನ್ನು ಒಳಗೊಂಡಿರುವ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಕಿರಣವನ್ನು ಪ್ರಾರಂಭ ಮಾಡಿದರು. ಆದರೆ ಈ ಇಎಸ್ ಐ ಆಸ್ಪತ್ರೆಯು ಅನೇಕ ಸೌಲಭ್ಯಗಳಿಂದ ವಂಚಿತವಾಗಿ ಮತ್ತು ನುರಿತ ವೈದ್ಯರು ಇಲ್ಲದೇ ಕಲಬುರಗಿ ಜಿಲ್ಲೆಗೆ ಮಾತ್ರ ಸೀಮಿತವಾಗಿ ಉಳಿದಿರುವುದು ದುರಾದೃಷ್ಟಕರ ವಿಷಯವಾಗಿದೆ, ಸದ್ಯ ಈ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ತೆರಳಿದಾಗ ಅಲ್ಲಿನ ವೈದ್ಯರು ವಿವಿಧ ಬಗೆ ತಪಾಸಣೆಗಾಗಿ ಮತ್ತು ಸಿಟಿ ಸ್ಕ್ಯಾನ್ ತಪಾಸಣೆಗಾಗಿ ಶಿಫಾರಸ್ಸು ಮಾಡುತ್ತಾರೆ. ಆದರೆ ಈ ಅಸ್ಪತ್ರೆಯಲ್ಲಿ ವಿಕಿರಣ ಶಾಸ್ತ್ರ ವಿಭಾಗದ ಸಿಟಿ ಸ್ಕ್ಯಾನ್-ಅಲ್ಟ್ರಾಸೌಂಡ್ ಸ್ಕ್ಯಾನ್ ತಪಾಸಣೆಗಾಗಿ ಬರುವ ಜನರಿಗೆ 30 ದಿನಗಳ ಸಮಯ ತೆಗೆದುಕೊಂಡು ಮುಂದಿನ ದಿನಾಂಕವನ್ನು ನಿಗದಿಪಡಿಸಿ ಬರೆದುಕೊಡುವ ಪರಿಸ್ಥಿತಿಯಿದ್ದು, ಒಂದು ದಿನದಲ್ಲಿ ಸಿಗುವಂತಹ ರಿಪೋರ್ಟ್ ಆಸ್ಪತ್ರೆಯ ಕೆಟ್ಟ ವ್ಯವಸ್ಥೆಯಿಂದ ಹೊರ ರೋಗಿಗಳು ಪರದಾಡುವಂತಾಗಿದೆ, ಇನ್ನೂ ಈ ವಿಷಯದ ಕುರಿತು ಆಸ್ಪತ್ರೆಯ ಡೀನ್ ಅವರ ಗಮನಕ್ಕೆ ತಂದಾಗ ವೈದ್ಯಾಧಿಕಾರಿಗಳ ಸಮಸ್ಯೆಯಿದೆ ಎಂದು ಹೇಳಿ ಕರ್ತವ್ಯದಿಂದ ನುಣುಚಿಕೊಳ್ಳುತ್ತಾರೆ. ಆದ್ದರಿಂದ ಈ ಪರಿಸ್ಥಿತಿ ಆದಷ್ಟು ಬೇಗ ಸರಿಪಡಿಸಬೇಕು ಮತ್ತು ಇಲ್ಲಿ ನರರೋಗ ತಜ್ಞರ ವಿಭಾಗ ಇಲ್ಲದಿರುವುದರಿಂದ ನರರೋಗ ವಿಭಾಗ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮಾಶಂಕರ ಕದಮ್, ಗೌತಮ್ ಕಾಂಬಳೆ, ಚೆನ್ನವೀರ ಕಾಳಕಿಂಗೆ ಸೇರಿದಂತೆ ಇನ್ನಿತರರು ಇದ್ದರು