ಯಾದಗಿರಿ: ಭಾರಿ ಮಳೆ ಹಾಗೂ ಸುಳಿಗಾಳಿಗೆ ಗಿಡಮರಗಳು ಸೇರಿದಂತೆ ವಿದ್ಯುತ್ ಕಂಬಗಳು, ಟಿಸಿಗಳು ನೆಲಕ್ಕುರುಳಿ ಸಂಕಷ್ಟಕ್ಕೆ ಈಡಾಗಿದ್ದನ್ನು ಮುಂದಿಟ್ಟು ಹೋರಾಟದ ಎಚ್ಚರಿಕೆ ನೀಡಿದ್ದಕ್ಕೆ ಎಚ್ಚೆತ್ತು ರೈತರಿಗೆ ನೆರವಿಗೆ ಬಂದಿರುವ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಒದಗಿಸಿದ್ದು ರೈತರು ನಿಟ್ಟಿಸಿರು ಬಿಟ್ಟಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಅಧಿಕಾರಿಗಳು ರೈತರ ಜಮೀನಿನ ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದ ನೆಲಕ್ಕುರುಳಿದ ಟಿಸಿ, ಕಂಬಗಳನ್ನು ಹೊಸದಾಗಿ ಅಳವಡಿಸುವ ಸಮಯಕ್ಕೆ ತೆರಳಿ ತ್ವರಿತ ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ಯಾದಗಿರಿ ತಾಲ್ಲೂಕಿನ ಮುದ್ನಾಳ, ವಡಗೇರಿ ತಾಲ್ಲೂಕಿನ ಮಳ್ಳಳ್ಳಿ ಮತ್ತು ಕ್ಯಾತನಾಳ, ಕಾಡಂಗೇರಾ ಶಹಾಪೂರ ತಾಲ್ಲೂಕಿನ ಚಟ್ನಳ್ಳಿ, ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಗಳು ಕಂಬಗಳು ಅಳವಡಿಸುವ ಕಾರ್ಯ ಭರದಿಂದ ನಡೆದಿದ್ದುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಈಗಾಗಲೇ ಕೆಲವು ರೈತರು ಹೆಸರು, ತೊಗರಿ, ಹತ್ತಿ ಬಿತ್ತಿದ್ದಾರೆ. ಇವರಿಗೆ ಈದೀಗ ಮಳೆ ಬಾರದೇ ಇದ್ದಲ್ಲಿ ಸಂಕಷ್ಟ ಎದುರಾಗುತ್ತಿತ್ತು. ಈದೀಗ ಕಂಬ ವಿದ್ಯುತ್ ಪರಿವರ್ತಕ ಅಳವಡಿಸಿರುವುದರಿಂದ ರೈತರಿಗೆ ಸಂಕಷ್ಟ ದೂರವಾದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಬಣ್ಣ, ಯಲ್ಲರಡ್ಡಿ, ಭೀಮರಾಯ, ಹಣಮಂತ, ರಾಜು, ಸಂತೋಷ, ರವಿ, ಶಿವು, ಬಾಗಪ್ಪ, ಸಾಬಣ್ಣ ದೇವಪ್ಪ ಮಲ್ಲಪ್ಪ ಸೇರಿ ಅನೇಕ ರೈತರು ಉಪಸ್ಥಿತರಿದ್ದರು.





