ಸೇಡಂ ತಾಲ್ಲೂಕಿನ ಕಲಕಂಬ ಗ್ರಾಮದ ದಿಗ್ಗಾಂವದ ಶಾಖಾ ಮಠದಲ್ಲಿ ಸೆ.7ರಂದು ನಡೆದಿರುವ ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆಗೆ ಮುಂಚೆ ವೀರಶೈವ ಧರ್ಮಗ್ರಂಥಗಳನ್ನು ಆಧರಿಸಿಯೇ ಶಿವಲಿಂಗದ ಮೇಲೆ ಪಾದವಿಟ್ಟು, ಪೂಜೆ ಮಾಡಲಾಗಿದೆ’ ಎಂದು ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಸಮರ್ಥನೆ ಮಾಡಿಕೊಂಡಿದ್ದಾರೆ.
ಶಿವಲಿಂಗದ ಮೇಲೆ ಪಾದವಿಟ್ಟು ಪಾದಪೂಜೆ ಮಾಡಿಸಿಕೊಂಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದಕ್ಕೆ ಸಿದ್ಧವೀರ ಶಿವಾಚಾರ್ಯರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ‘ಇಲ್ಲಿನ ಈಶ ಸಿದ್ಧವೀರ ಶಿವಾಚಾರ್ಯ ಬಸವೇಶ್ವರ ದೇವಾಲಯದ ಲಿಂಗ ಭಕ್ತರಿಗೆ ಕಾಣದಂತಾಗಿತ್ತು.
ಭಕ್ತರು ಹೊಸ ಶಿವಲಿಂಗ ಪ್ರತಿಷ್ಠಾಪಿಸಿದರು. ಪ್ರತಿಷ್ಠಾಪನೆಗೆ ಮುಂಚೆ ಅದು ಕಲ್ಲಾಗಿತ್ತು. ಗುರುವಿನ ಪಾದೋದಕ ಪೂಜೆಯ ನಂತರವೇ ಲಿಂಗಕ್ಕೆ ದೈವತ್ವ ಪ್ರಾಪ್ತಿಯಾಗುತ್ತದೆ. ನಂತರ ಅದು ಪೂಜೆಗೆ ಅರ್ಹವಾಗುತ್ತದೆ.
ಧರ್ಮ ಗ್ರಂಥಗಳನ್ನು ಆಧಾರವನ್ನಿಟ್ಟುಕೊಂಡೇ ಪಾದ ಇರಿಸಿ, ಪಾದೋದಕದಿಂದ ಲಿಂಗದ ಶಿಲೆ ಶುದ್ದೀಕರಣ ಮಾಡಿದ್ದೇವೆ’ ಎಂದು ಹೇಳಿದರು.
ಶಿವಲಿಂಗ ಸ್ಥಾಪನೆಗೆ ಧಾನ್ಯ, ಜಲ, ಶಯನ, ಪುಷ್ಪವಾಸ ಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಗುರುವಿನ ಪಾದೋದಕದ ಪೂಜೆಯಿಲ್ಲದೆ, ಶಿವಲಿಂಗ ಸ್ಥಾಪನೆ ಹಾಗೂ ಪೂಜೆಗೆ ಯೋಗ್ಯವಲ್ಲ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಕಾಶಿ ಪೀಠದ ಜಗದ್ಗುರುಗಳು ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.
ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡುವ ಪದ್ದತಿಯ ಉಲ್ಲೇಖ ಯಾವ ಧರ್ಮಗ್ರಂಥದಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದವೀರ ಶಿವಾಚಾರ್ಯರು, ‘ಗದಗದ ಎಚ್. ಟಿ.ಮಹಾಂತೇಶ ಶಾಸ್ತ್ರಿಗಳು 1967ರಲ್ಲಿ ರಚಿಸಿದ ‘ವೀರಶೈವ ನವರತ್ನ’ ಗ್ರಂಥದ ಪುಟ ಸಂಖ್ಯೆ 80ರಲ್ಲಿ ಹಾಗೂ ಹುಬ್ಬಳ್ಳಿಯ ಚೆನ್ನವೀರ ಶಾಸ್ತ್ರೀ ಸಾಲಿಮಠ ಅವರು ರಚಿಸಿದ ‘ವೀರಶೈವ ದಶರತ್ನ’ ಗ್ರಂಥದಲ್ಲಿ ಈ ಕುರಿತು ಉಲ್ಲೇಖವಿದೆ’ ಎಂದು ಹೇಳಿದರು.
ಮಠದ ವಕ್ತಾರ ಶರಣು ಊಡಗಿ, ನಾಗಭೂಷಣ ಸ್ವಾಮಿ, ಸೋಮಶೇಖರಯ್ಯ, ಬಸವಂತರಾಯ ಮಾಲಿಪಾಟೀಲ, ಚಂದ್ರಶೇಖರ ಪಾಟೀಲ, ಮಹಾದೇವಪ್ಪ ಹಣಿಕೇರಿ, ಶಂಭುಲಿಂಗಪ್ಪ ಸಂಗಾವಿ, ಶಿವರಾಜ ಸಂಗಾವಿ, ಚೆನ್ನಪ್ಪ ಪಲ್ಲೇದ, ಕಾಶಪ್ಪ ದುಗನೂರು, ಶಿವನಾಗಪ್ಪ ಮುತಲಗಡ್ಡಿ, ರೇವಣಸಿದ್ದಯ್ಯ ಕಲಕಂಬ ಹಾಗೂ ಶಿವಶರಣಪ್ಪ ಇತರರು ಇದ್ದರು