Home Uncategorized ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಮಾರಾಟ ಮಳಿಗೆಗಳ ಮೇಲೆ ಹಠಾತ್ ದಾಳಿ

ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಮಾರಾಟ ಮಳಿಗೆಗಳ ಮೇಲೆ ಹಠಾತ್ ದಾಳಿ

0
ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಮಾರಾಟ ಮಳಿಗೆಗಳ ಮೇಲೆ ಹಠಾತ್ ದಾಳಿ

ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಮಾರಾಟ ಮಳಿಗೆಗಳ ಮೇಲೆ ಹಠಾತ್ ದಾಳಿ:

ರೈತರಿಗೆ ಮಾರಾಟದ ರಸೀದಿ ನೀಡದಿದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ

ಕಲಬುರಗಿ,ಜೂ.13(ಕ.ವಾ) ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ ಜೇವರ್ಗಿ ತಾಲೂಕಿನ ವಿವಿಧ ಕೃಷಿ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬೀಜ ಖರೀದಿದಾರರಿಗೆ ನಿಗದಿತ ನಗದು ಅಥವಾ ಉದ್ರಿ ರಸೀದಿ ಬಿಲ್ಲು ನೀಡದಿದ್ದಕ್ಕೆ ಜೇವರ್ಗಿ ತಾಲೂಕಿನ 8 ಕೃಷಿ ಮಾರಾಟ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳವಾರ ರಾತ್ರಿ 9ರ ವರೆಗೆ ಕೃಷಿ ಮಾರಾಟ ಮಳಿಗೆಗೆಳಿಗೆ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಜೇವರ್ಗಿ, ಯಡ್ರಾಮಿ, ಇಜೇರಿ, ಜೇರಟಗಿ ಹೀಗೆ ಸುಮಾರು 10 ಕೃಷಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ತಂಡವು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು, ಮಾರಾಟ ವಿವರಗಳನ್ನು ಪರಿಶೀಲಿಸಿತ್ತು.

ಅಧಿಕಾರಿಗಳ ತಂಡ ಭೇಟಿ ಸಂದರ್ಭದಲ್ಲಿ ಜೇವರ್ಗಿಯ 5, ಇಜೇರಿಯ 1 ಹಾಗೂ ಜೇರಟಗಿಯ 2 ಮಾರಾಟ ಮಳಿಗೆಗಳ ಮಾಲೀಕರು ಮಾರಾಟ ಬಿಲ್ಲುಗಳ ಮೇಲೆ ಖರೀದಿದಾರ ರೈತರ ಸಹಿ ಪಡೆದಿರುವುದಿಲ್ಲ. ಬೀಜ ಖರೀದಿದಾರರಿಗೆ ನಿಗಧಿಪಡಿಸಿದ ನಗದು ಅಥವಾ ಉದ್ರಿ ಬಿಲ್ಲು ನೀಡಿರುವದಿಲ್ಲವೆಂದು ಗೊತ್ತಾದ ಹಿನ್ನೆಲೆಯಲ್ಲಿ ಸದರಿ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನು ಮಾರಾಟಕ್ಕೆ ಪರವಾನಿಗೆ (Principles certificates)ಪಡೆಯದೆ ಹತ್ತಿ ಬೀಜ ಮಾರುತ್ತಿದ್ದ ಜೇರಟಗಿಯ ಮೇ. ಗರಿದೇವರು ಟ್ರೇಡರ್ಸ್, ಮೇ. ಶಿವಾ ಟ್ರೇಡರ್ಸ್ ಹಾಗೂ ಮೇ. ಮಹಾಲಕ್ಷ್ಮಿ ವಿಘ್ನೇಶ್ವರ ಆಗ್ರೋ ಟ್ರೇಡರ್ಸ್ ಇವರುಗಳ 26.50 ಲಕ್ಷ ರೂ.ಗಳ ಮೌಲ್ಯದ 3,067 ಹತ್ತಿ ಬೀಜದ ಪ್ಯಾಕೆಟಗಳ ಮಾರಾಟಕ್ಕೂ ತಡೆ ಆದೇಶ ನೀಡಲಾಗಿದೆ.

ಕಲಬರಗಿಯಲ್ಲೂ ತಪಾಸಣೆ:

ಇತ್ತ ಕಲಬುರಗಿ ನಗರದಲ್ಲಿ ಇದೇ ದಿನದಂದು ಜಾಗೃತಿ ದಳದ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದ ತಂಡ ಹಲವು ಕೃಷಿ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು, ಮಾರಾಟ ವಿವರಗಳನ್ನು ಪರಿಶೀಲಿಸಿತು. ಅಲ್ಲದೆ ಮಾರಾಟ ಬಿಲ್ಲುಗಳ ಮೇಲೆ ರೈತರ ಸಹಿ ಪಡೆದಿಲ್ಲ ಹಾಗೂ ನೊಂದಣಿ ಧೃಢೀಕರಣ ಪತ್ರವಿಲ್ಲದೆ ಮಾರಾಟ ಮಾಡುತ್ತಿದ್ದ ನಗರದ ಬಸವ ಆಗ್ರೋ ಏಜೇನ್ಸಿ, ಮಾಹಾಲಕ್ಷ್ಮಿ ಆಗ್ರೋ ಏಜೇನ್ಸಿ, ಚಂದ್ರಿಕಾ ಆಗ್ರೋ ಸಿಂಡಿಕೇಟ್ ಹಾಗೂ ಮಲ್ಲಿಕಾರ್ಜುನ ಆಗ್ರೋ ಏಜೇನ್ಸಿ ಮಳಿಗೆಗಳ ಮಾಲಿಕರುಗಳಿಗೆ ನೋಟಿಸ್ ನೀಡಲಾಯಿತು.

ಮಾರಾಟಗಾರರಿಗೆ ಎಚ್ಚರಿಕೆ:

ಇದೇ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಯಾವುದೇ ಸಂಧರ್ಭದಲ್ಲಿ ಬೀಜ ಮತ್ತು ರಸಗೊಬ್ಬರಗಳನ್ನು ಎಂ.ಆರ್.ಪಿ (ಗರಿಷ್ಠ ಮಾರಾಟ ದರ) ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಮತ್ತು ಬೀಜ ಮತ್ತು ರಸಗೊಬ್ಬರ ಮಾರಾಟ ಕಾಯ್ದೆಗಳನ್ನು ಉಲ್ಲಂಘಿಸಬಾರದೆಂದು ಕೃಷಿ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here

error: Content is protected !!