ಬಡವರ ಕೆಲಸಗಳನ್ನು ಸ್ವಯಂ ಪ್ರೇರಿತವಾಗಿ ನಿರ್ವಹಿಸಿ: ಕೃಷ್ಣ ಭೈರೇಗೌಡ ಮೈಸೂರು,ನ.07(ಕರ್ನಾಟಕವಾರ್ತೆ):- ಕಂದಾಯ ಇಲಾಖೆಯಲ್ಲಿ ರೈತರು ಹಾಗೂ ಬಡವರ ಕೆಲಸ ಹೆಚ್ಚಿದ್ದು, ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಕೆಲಸ ನಿರ್ವಹಿಸಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು. ಅವರು ಇಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು. ಕಂದಾಯ ಇಲಾಖೆಯ ನ್ಯಾಯಾಲಯ ಪ್ರಕರಣ, ದಾಖಲೆಗಳ ಗಣಕೀಕರಣ, ಶೇ 100 ರಷ್ಟು ಈ ಆಫೀಸ್ ನಲ್ಲಿ ಕಡತ ವಿಲೇವಾರಿ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದರು. ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ 163 ಗ್ರಾಮಗಳನ್ನು ಗುರುತಿಸಲಾಗಿತ್ತು. ಜಿಲ್ಲಾಧಿಕಾರಿಗಳಿಂದ 129 ಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, 107 ಗ್ರಾಮಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಗ್ರಾಮಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ನಿರ್ದೇಶನ ನೀಡಿದರು. ಹೋಬಳಿವಾರು ದರಖಾಸ್ತು ಪೋಡಿ ಬಾಕಿ ಇರುವ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದ ಸಚಿವರು ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈ ಪೌತಿ ಖಾತಾ ಅರ್ಜಿಗೆ ಸಂಬಂಧಿಸಿದಂತೆ 202215 ಅರ್ಜಿಗಳಿದ್ದು (ಮೃತರ ಹೆಸರಿನಲ್ಲಿ) ಇದರಲ್ಲಿ 9367 ಗ್ರಾಮ ಆಡಳಿತಾಧಿಕಾರಿಗಳ ಹಂತದಲ್ಲಿ, 7431 ಕಂದಾಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದಲ್ಲಿದ್ದು, 4185 ಈ ಪೌತಿ ಖಾತಾ ಭೂಮಿಯಲ್ಲಿ ಜನರೇಟ್ ಆಗಿರುತ್ತದೆ. ಒಂದು ಅರ್ಜಿಗೆ 4 ವರಸುದಾರರನ್ನು ಅಂದಾಜಿಸಲಾಗಿದೆ. ಈ ಪೌತಿ ಆಂದೋಲನದಲ್ಲಿ ಮುತವರ್ಜಿ ವಹಿಸಿದರೆ ಶೇ 70 ರಷ್ಟನ್ನು ತಡ ಮಾಡದೆ ಪೂರ್ಣಗೊಳಿಸಬಹುದು ಎಂದರು. ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಹಂತದಿಂದ ಎಲ್ಲಾ ಹಂತದಲ್ಲಿ ಕೆಲಸಗಳು ಶೇ 100 ರಷ್ಟು ಕೆಲಸಗಳು ಈ ಆಫೀಸ್ ನಲ್ಲಿ ಕೈಗೊಳ್ಳಬೇಕು. ಇದಕ್ಕೆ ಬೇಕಿರುವ ಕ್ಯಾಸ್ವನ್ ಇಂಟರ್ ನೆಟ್ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ದರಖಾಸ್ತು ಪೋಡಿಗೆ 3215 ಗುರಿ ನಿಗದಿಯಾಗಿದ್ದು, ನವೆಂಬರ್ 21 ರೊಳಗೆ 2000 ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ವಿಶೇಷ ಉಪವಿಭಾಗಾಧಿಕಾರಿಗಳ ಕೋಟ್೯ಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಸಭೆಗೆ ವಿವರಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ನ ಶಾಸಕರಾದ ಸಿ. ಎನ್.ಮಂಜೇಗೌಡ, ಡಾ. ಡಿ ತಿಮ್ಮಯ್ಯ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್ , ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ.ಶಿವರಾಜು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು
ಬಡವರ ಕೆಲಸಗಳನ್ನು ಸ್ವಯಂ ಪ್ರೇರಿತವಾಗಿ ನಿರ್ವಹಿಸಿ: ಕೃಷ್ಣ ಭೈರೇಗೌಡ
ಬಡವರ ಕೆಲಸಗಳನ್ನು ಸ್ವಯಂ ಪ್ರೇರಿತವಾಗಿ ನಿರ್ವಹಿಸಿ: ಕೃಷ್ಣ ಭೈರೇಗೌಡ





