ಅಪರಾಧಿಗಳು ಎಷ್ಟೇ ಚಾಣಾಕ್ಷ್ಯರಾಗಿದ್ದರೂ, ಕಾನೂನಿನಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದಾಗಲೇ ಸಾಬೀತು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ದೆಹಲಿಯಲ್ಲಿ ಹೇಳಿದ್ದಾರೆ.
CBI ಏರ್ಪಡಿಸಿದ್ದ, ’ತಲೆ ಮರೆಸಿಕೊಂಡವರ ಹಸ್ತಾಂತರ: ಸವಾಲುಗಳು ಮತ್ತು ತಂತ್ರಗಳ ಕುರಿತ ಸಮ್ಮೇಳನ’ವನ್ನು ಉದ್ಘಾಟಿಸಿದ ಸಚಿವರು, ಉಗ್ರರಾಗಲೀ, ಸೈಬರ್ ಅಪರಾಧಿಗಳಾಗಲೀ ಅಥವಾ ತಲೆಮರೆಸಿಕೊಂಡ ಅಪರಾಧಿಗಳಾಗಲೀ ಅವರನ್ನು ಕಾನೂನಿನ ಎದುರು ತಂದು ನಿಲ್ಲಿಸುವಂಥ ಕಾನೂನುಗಳನ್ನು ರೂಪಿಸಲಾಗಿದೆ ಎಂದರು.
ಈ ವರ್ಷ ಸಿಬಿಐ ನೇತೃತ್ವದಲ್ಲಿ ಪರಾರಿಯಾದ 35 ಮಂದಿಯನ್ನು ಮರಳಿ ಕರೆತರಲಾಗಿದೆ. ಈ ಅಪರಾಧಿಗಳಿಂದ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಚಿವ ಅಮಿತ್ ಷಾ ಹೇಳಿದರು.
ಕಳೆದೊಂದು ದಶಕದಲ್ಲಿ ಭಾರತವು ಅಂತರರಾಷ್ಟ್ರೀಯ ತನಿಖೆಗಳಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ. ವಿದೇಶಗಳಿಗೆ ಪರಾರಿಯಾದವರನ್ನು ಮರಳಿ ಕರೆತರಲು CBI ಸಂಘಟಿತ ವಿಧಾನಗಳನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ ಎಂದರು.
ಭಾರತವು, ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ರೀತಿಯ ನೀತಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಚಿವ ಅಮಿತ್ ಷಾ ಹೇಳಿದರು.
ಸಂಘಟಿತ ಅಪರಾಧಿಗಳ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಅನೇಕ ಅಪರಾಧಿಗಳು ಭಾರತದಿಂದ ಪಲಾಯನ ಮಾಡಿ ವಿದೇಶಗಳಲ್ಲಿ ವಾಸಿಸುವ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಿದರ್ಶನಗಳಿವೆ. ಇಂಥ ಅಪರಾಧಿಗಳನ್ನು ತ್ವರಿತವಾಗಿ ಹಸ್ತಾಂತರಿಸುವ ಸಂಬಂಧ ಮಾರ್ಗಸೂಚಿಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಇದಾಗಲೇ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು
ಅಪರಾಧಿಗಳು ಎಷ್ಟೇ ಚಾಣಾಕ್ಷ್ಯರಾಗಿದ್ದರೂ, ಕಾನೂನಿನಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ವಿದೇಶಗಳಿಗೆ ಪರಾರಿಯಾದವರನ್ನು ಕರೆತರಲು ಹೊಸ ತಂತ್ರ; ತಲೆಮರೆಸಿಕೊಂಡ 35 ಅಪರಾಧಿಗಳು ಭಾರತಕ್ಕೆ ವಾಪಸ್





